ದೀಪದಿಂದ ದೀಪ ಹಚ್ಚಿ...


ದೀಪದಿಂದ ದೀಪ ಹಚ್ಚಿ, ದೀಪಗಳ ಸಾಲು ಮಾಡುತ್ತಾ, ಮನೆಮನಗಳ ಬೆಳಗುವ ಹಬ್ಬವೇ ದೀಪಾವಳಿ. ನನಗೆ ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಖುಷಿ. ಮನೆತುಂಬ ದೀಪ ಹಚ್ಚಿ ಅದು ಬೀರುವ ಬೆಳಕನ್ನು ನೊಡುತ್ತಿದ್ದರೆ ಎಷ್ಟು ಚಂದ!. ಈ ವರ್ಷ ದೀಪಾವಳಿ ಹೇಗೆ ಆಚರಿಸುವುದೋ ಎಂದು ಅನಿಸುತ್ತಿತ್ತು. ಯಾಕೆಂದರೆ ಇದು ನನ್ನ ವಿವಾಹದ ನಂತರದ ಮೊದಲ ದೀಪಾವಳಿ. ಅಮೇರಿಕೆಯಲ್ಲಿ ಹಬ್ಬ ಹೇಗೆಲ್ಲಾ ಆಚರಿಸಬಹುದು ಎಂದು ಹಬ್ಬದ ಹಿಂದಿನದಿನ ಯೋಚಿಸುತ್ತಾ ಇದ್ದೆ. ಹಾಗೆ ಇ- ಮೇಲ್ ನೋಡಿದೆ, ನನ್ನ ಗೆಳತಿಯರು online ಬಂದರೆ ಮಾತಾಡೋಣ ಎಂದು. ಒಂದು ಈ-ಮೇಲ್ ಇತ್ತು. ಹಬ್ಬದ ಆಮಂತ್ರಣ!. ಉತ್ಸಾಹದಿಂದ ನೋಡಿದೆ. ಇಲ್ಲಿ ಒಬ್ಬ ಮಹಾನುಭಾವರು ನೆರೆಹೊರೆಯ ಮಕ್ಕಳಿಗೆ ನಮ್ಮ ಭಾರತಿಯ ಸಂಸ್ಕ್ರತಿಯ ಬಗ್ಗೆ ಕ್ಲಾಸ್ ನಡೆಸುತ್ತಾರೆ. ಅವರು ಕಳುಹಿಸಿದ ಇನ್ವಿಟೇಶನ್ ಆಗಿತ್ತು. ಉತ್ಸಾಹದಿಂದ "We are happy to join you for the occasion" ಅಂತ ಪ್ರತಿ ಉತ್ತರ ನೀಡಿದೆ.

ಮರುದಿನ ಸಂಭ್ರಮದಿಂದ ನಾನು ಮತ್ತು ನಮ್ಮನೆಯವರು ಹೊಸ ಬಟ್ಟೆ ಹಾಕಿಕೊಂಡು ತಯಾರಾಗಿ ಕಾರ್ ಹತ್ತಿದೆವು. ಹಬ್ಬದ ಆಚರಣೆಯ ಸ್ಥಳ ಇದ್ದಿದ್ದು ಬೆಬಿಲೋನ್ ನಲ್ಲಿ, ಮನೆಯಿಂದ ಅರ್ಧ ಗಂಟೆ ದಾರಿ. ಅಲ್ಲಿ ತಲುಪುವಾಗ ಸಂಜೆ ೭ ಗಂಟೆ ಆಗಿತ್ತು, ಹಸನ್ಮುಖರಾಗಿ ಮಾತನಾಡಿಸುತ್ತಿದ್ದ ಎಲ್ಲರ ಪರಿಚಯ ಮಾಡಿಕೊಂಡೆವು. ಮನೆಯ ಸುತ್ತಲೂ ದೀಪ ಹಚ್ಚಿ, ದೇವರ ಮುಂದೆ ರಂಗೋಲಿ ಹಾಕುತ್ತಿದ್ದರು.. ಒಂದು ಕ್ಷಣ ನಾನು ಭಾರತದಲ್ಲೇ ಇರುವೆನೆಂದು ಅನಿಸುತ್ತಿತ್ತು. ನನಗೆ ರಂಗೋಲಿ ಹಾಕುವುದೆಂದರೆ ಇಷ್ಟ. ಬಣ್ಣ ಹಾಕಲು ಕೈಜೋಡಿಸಿದೆ. ದೇವರ ಮುಂದೆ ಹಾಸಿರುವ ಚಾಪೆಯ ಮೇಲೆ ಮಕ್ಕಳೆಲ್ಲ ಸಾಲಾಗಿ ಕುಳಿತಿದ್ದರು. ಅವರ ಸಾಲನ್ನು ದೊಡ್ಡವರೂ ಅನುಸರಿಸಿದರು. ಬಾಲವಿಹಾರ ಕ್ಲಾಸ್ ನಡೆಸುವ ಮೋಹನ್ ಜಿ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲು ಮಕ್ಕಳಿಗೆ ಸೂಚನೆ ಇತ್ತರು. ಎಲ್ಲ ಮಕ್ಕಳು ಒಕ್ಕೊರಲಿನಲ್ಲಿ ಇಂಪಾದ ಪ್ರಾರ್ಥನೆ ಆರಂಭಿಸಿದರು. ಕಿವಿಗೆ ಹಿತವಾಗುತ್ತಿತ್ತು. ನಾನು ಮನಸ್ಸಿನಲ್ಲೇ ಯೋಚಿಸುತ್ತಿದ್ದೆ. "ಎಂತಹ ಒಳ್ಳೆ ಸಂಸ್ಕಾರ ಕೊಟ್ಟಿದ್ದಾರೆ ಮಕ್ಕಳಿಗೆ, ಸಹನೆ,ಶಿಸ್ತು, ಹಿರಿಯರನ್ನು ಗೌರವಿಸುವ ಗುಣ ಇವೆಲ್ಲ ನಾವು ನಮ್ಮ ಮಕ್ಕಳಿಗೆ ಕಲಿಸುವ ಪಾಠ, ಭಾರತ ದಿಂದ ೧೫,೦೦೦ ಮೈಲು ದೂರದಲ್ಲಿದ್ದರೂ, ನಮ್ಮ ಅದ್ಭುತವಾದ ಸಂಸ್ಕೃತಿ ಉಳಿಸಿಕೊಂಡು ಹೋಗಬಹುದು. ಈ ಮಂತ್ರಗಳನ್ನು ಕೇಳುತ್ತಿದ್ದರೆ ಆಗುವ ಆನಂದವೇ ಬೇರೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಾವು ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು, ಮೋಹನ್ ಜಿ ಮಾಡುತ್ತಿರುವದು ತುಂಬ ಒಳ್ಳೆಯ ಕೆಲಸ." ಎಂದು. ಹೀಗೆ ಪ್ರಾರ್ಥನೆ ಮುಗಿದ ಮೇಲೆ, ಮೋಹನ್ ಜಿ ಅವರು "ಮಕ್ಕಳೇ, ನಿಮಗೆ ಗೊತ್ತಿರುವಂತೆ ದೀಪಾವಳಿಯ ಬಗ್ಗೆ ಹೇಳಿ" ಎಂದರು. ಒಬ್ಬರಾದ ಕೂಡಲೇ, ಒಬ್ಬರು ಶಿಸ್ತಿನಿಂದ ಎದ್ದು ಬಂದು ಮಕ್ಕಳು ಅವರ ಅವರ ಪರಿಚಯ ಮಾಡಿಕೊಂಡು, ದೀಪಾವಳಿ ಯನ್ನು ಆಚರಿಸುವ ಕಾರಣ, ಅದರ ಸಂದೇಶ ಹೇಳಲು ಮುಂದಾದರು.

"People of Ayodya were celebrating the return of Rama from his 14 years of exile by lighting lamps"

"Krishna killed narakasura"

"Deepa - avali is a rows of light"

"Deepaawali symbolizes victory of good over evil.., Fight against the evil which is inside ourselves"

"ದೀಪದಿಂದ ದೀಪ ಹಚ್ಚಿ- ನಮಗೆ ತಿಳಿದಿರುವ ವಿಷಯವನ್ನು ಎಲ್ಲರಿಗೂ ತಿಳಿಸಬೇಕು, ನಮ್ಮ ಜೀವನದಲ್ಲಿರುವ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ, ಜ್ಞಾನವೆಂಬ ಬೆಳಕನ್ನು ಹಚ್ಚಬೇಕು"
ಹೀಗೆ ಹತ್ತು ಹಲವಾರು ಸಂದೇಶವನ್ನು, ನಾವು ದೊಡ್ಡವರು ಮಕ್ಕಳಿಂದ ಕಲಿಯುತ್ತಿದ್ದೆವು. ಅಲ್ಲಿ ಉತ್ತರ ಭಾರತದವರು, ದಕ್ಷಿಣ ಭಾರತದವರು ಎಲ್ಲರು ಇದ್ದರು. ಎಲ್ಲರು ದೀಪಾವಳಿ ಆಚರಿಸುವ ವಿಧ ಬೇರೆ ಬೇರೆ. ಅವರವರ ಮನೆಯಲ್ಲಿ ಹೇಗೆ ಆಚರಿಸುತ್ತಾರೆ, ಹಾಗೆ ಆಚರಿಸಲು ಕಾರಣಗಳೇನು ಎಂದು ಪಾಲಕರು ಹೇಳಿದರು. ಮೋಹನ್ ಜಿ ಸೇರಿದಂತೆ ಹಲವರು ದೀಪಾವಳಿ ಯ ಹಿಂದಿನ ಅರ್ಥವನ್ನು ಹೇಳಿದರು.
ವಿಘ್ನೇಶ್ ದೀಪಾವಳಿ ಹಬ್ಬದ ಮಹತ್ವವನ್ನು ವಿವರಿಸುತ್ತ "Krishna killed narakaasura and released 16,000 women from his prison, as well as brought new light in their life. It symbolizes that, who are fortunate enough, need to uplift the life of less fortunate and less priviledged ones, so ನಮ್ಮ ಜೀವನವನ್ನು ಬೆಳಕಾಗಿಸುತ್ತ, ಇನ್ನೊಂದು ಜೀವನಕ್ಕೆ ಬೆಳಕನ್ನ ತರಬೇಕು " ಎಂದು ಹೇಳಿದ ಮಾತಿಗೆ ಎಲ್ಲರೂ ತಲೆದೂಗಿದರು.

ಮನಸ್ಸಿಗೆ ಹಿತ ಅನಿಸುತ್ತಿತ್ತು. ಈ ದೀಪದ ಹಬ್ಬದಲ್ಲಿ ಎಷ್ಟೊಂದು ಅರ್ಥ ಅಡಗಿದೆ ಎಂದು ಯೋಚನೆ ಮಾಡುತ್ತಾ ಇದ್ದಂತೆಯೇ ಎಲ್ಲರೂ ಸೇರಿ ದೇವರಿಗೆ ಭಕ್ತಿಯಿಂದ ಮಂಗಳಾರತಿ ಮಾಡಿದೆವು.

ಗುಜರಾತಿನ ಜನರಿಗೆ ಹಬ್ಬ ಎಂದರೆ ದಾಂಡಿಯಾ ನೃತ್ಯ ಇರಲೇಬೇಕು. ಎಲ್ಲರಿಗೂ ಕೋಲಾಟದ ಕೋಲು ಕೊಟ್ಟರು. ನಾನು ದಾಂಡಿಯಾ ಕುಣಿಯುವುದು ಇದೆ ಮೊದಲು. ಒಂದು ಹೆಜ್ಜೆಯೂ ಗೊತ್ತಿಲ್ಲ. ಆದರು ಮಾಡುವ ಆಸೆ! ದಾಂಡಿಯಾ ಗೊತ್ತಿರುವ ಒಬ್ಬರು ನಮಗೆ ಹೆಜ್ಜೆ ಹೇಗೆ ಹಾಕಬೇಕೆಂದು ಹೇಳಿಕೊಟ್ಟರು. ಅಹ್! ಎಷ್ಟು ಚೆನ್ನಾಗಿತ್ತು ದಾಂಡಿಯಾ...ಸುಸ್ತಾಗಿ ಬೆವರು ಬರುವಷ್ಟು ಕುಣಿದೆವು. ರಾತ್ರಿ ೧೧ ಆಗಿತ್ತು. ಎಲ್ಲರೂ ಸೇರಿ potluck ರೀತಿಯಲ್ಲಿ ಜೋಡಿಸಿದ್ದ ಭರ್ಜರಿ ಹಬ್ಬದ ಊಟ ಮಾಡಿ ಮೋಹನ್ ಜಿ ಅವರಿಗೆ ಧನ್ಯವಾದ ಅರ್ಪಿಸಿ ಮನೆಗೆ ಹೊರಟೆವು. ಕಾರಿನಲ್ಲಿ ಕುಳಿತರೂ, ಮನೆಗೆ ಬಂದು ದಿಂಬಿಗೆ ತಲೆಯಿತ್ತರೂ, ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ಪ್ರಾರ್ಥನೆಯ ಮಂತ್ರ ಘೋಷ ಕಿವಿಯಲ್ಲಿ ಇನ್ನೂ ಮೊಳಗುತ್ತಿತ್ತು.
Print Friendly and PDF
Share/Bookmark

5 comments:

ಚಂದ್ರಕಾಂತ ಎಸ್ said...

ನಮಸ್ತೆ. ನಿಮ್ಮ ಬ್ಲಾಗ್ ಈ ದಿನವೇ ಮೊದಲು ನೋಡಿದ್ದು.
ನಾನು ಬ್ಲಾಗ್ ಲೋಕಕ್ಕೆ ಹೊಸಬಳು.
ನಿಮ್ಮ ವಿವಾಹಾನಂತರದ ಮೊದಲ ದೀಪಾವಳಿ ಇಷ್ಟೊಂದು ಚೆನ್ನಾಗಿರುವುದಕ್ಕೆ ನಿಮಗೆ ಬಹಳ ಖುಶಿ ಆಗಿರಬೇಕು. ಚೆನ್ನಾಗಿ ಬರೆದಿರುವಿರಿ. ದೀಪಾವಳಿಯ ಶುಭಾಶಯಗಳು.

Eat Right said...

ತುಂಬ ಧನ್ಯವಾದಗಳು ಚಂದ್ರಕಾಂತ ಅವರೇ. ನಿಮಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಚಂದ್ರಕಾಂತ ಎಸ್ said...

ನನ್ನ ಬ್ಲಾಗ್ ಕಡೆಗೂ ಒಮ್ಮೆ ಕಣ್ಣು ಹಾಯಿಸಿ.

Ittigecement said...
This comment has been removed by the author.
ತೇಜಸ್ವಿನಿ ಹೆಗಡೆ said...

ನಿವೇದಿತ,

ಅರ್ಥಪೂರ್ಣ ದೀಪಾವಳಿಯ ಆಚರಣೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಿ. ತುಂಬಾ ಖುಶಿಯಾಯಿತು ಓದಿ. ಇಂತಹ ಆಚರಣೆಗಳಿಂದಲೇ ಹಬ್ಬದ ನಿಜವಾದ ಮಹತ್ವ ಅರಿವಾಗುವುದು ಅಲ್ಲವೇ?